ಸುಡುವ ಬೇಸಿಗೆಯಲ್ಲಿ ಬಸ್ ಪ್ರಯಾಣಿಕರ ದಾಹ ನೀಗಿಸಲು ಮೈಸೂರು ಮತ್ತು ಮಂಡ್ಯ ಭಾಗದ ಕೆಎಸ್ಆರ್ಟಿಸಿ ಸಿಬ್ಬಂದಿ ಮಾಡಿರುವ ಮಾನವೀಯ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಟಿ.ನರಸೀಪುರ–ಬನ್ನೂರು–ಮಂಡ್ಯ ಮಾರ್ಗದ ಬಸ್ಸಿನಲ್ಲಿ ನಿರ್ವಾಹಕ ಲಕ್ಷ್ಮೇಶ್ ಮತ್ತು ಚಾಲಕ ಹೇಮಂತ್ ಅವರು ತಮ್ಮ ಸ್ವಂತ ಆಸಕ್ತಿಯಿಂದ ಬಸ್ಸಿನೊಳಗೆ ಶುದ್ಧ ಕುಡಿಯುವ ನೀರಿನ ಕ್ಯಾನ್ ಅಳವಡಿಸುವ ಮೂಲಕ ಪ್ರಯಾಣಿಕರಿಗೆ ಆಸರೆಯಾಗಿದ್ದಾರೆ. ಪ್ರತಿದಿನ ಸ್ವತಃ ಶುದ್ಧ ನೀರಿನ ಘಟಕಗಳಿಂದ 2-3 ಕ್ಯಾನ್ ನೀರನ್ನು ತಂದು ಬಸ್ಸಿನಲ್ಲಿ ಇರಿಸುತ್ತಿರುವ ಈ ಜೋಡಿಯ ಕಾರ್ಯದಿಂದ ಸ್ಫೂರ್ತಿ ಪಡೆದ ಇದೇ ಮಾರ್ಗದ ಇತರ 5 ಬಸ್ಗಳ ಸಿಬ್ಬಂದಿ ಕೂಡ ಈಗ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ.
ಕರ್ತವ್ಯದ ಜೊತೆಗೆ ಮಾನವೀಯತೆಯನ್ನು ಮೆರೆದ ಈ ಸಾರಿಗೆ ನೌಕರರ ಕಾರ್ಯಕ್ಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆ ವ್ಯಕ್ತವಾಗುತ್ತಿದ್ದು, ಪ್ರಯಾಣಿಕರು ಧನ್ಯವಾದ ಅರ್ಪಿಸುತ್ತಿದ್ದಾರೆ.


