ದಕ್ಷಿಣ ಭಾರತದ ಮಹಾಕುಂಭಮೇಳ ಎಂದೇ ಖ್ಯಾತಿ ಪಡೆದಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವವು ಭಕ್ತಿ ಮತ್ತು ಸಡಗರದೊಂದಿಗೆ ಆರಂಭವಾಗಿದೆ. ಒಂಬತ್ತು ದಿನಗಳ ಕಾಲ ನಡೆಯುವ ಈ ಐತಿಹಾಸಿಕ ಜಾತ್ರೆಯು ಫೆಬ್ರವರಿ 24 ರಿಂದ ಮಾರ್ಚ್ 4 ರವರೆಗೆ ಮಲೆನಾಡಿನ ಗಡಿಯಲ್ಲಿ ಸಾಂಪ್ರದಾಯಿಕ ವೈಭವವನ್ನು ಸಾರಲಿದೆ.

ಮುಂಜಾನೆ 8:30ರ ಶುಭ ಲಗ್ನದಲ್ಲಿ ಜಗನ್ಮಾತೆ ಮಾರಿಕಾಂಬೆಯ ರಥಾರೋಹಣ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಸರ್ವಾಲಂಕೃತಳಾದ ಅಮ್ಮನ ದರ್ಶನ ಪಡೆಯಲು ಭಕ್ತ ಸಾಗರವೇ ಹರಿದುಬಂದಿದ್ದು, ರಥೋತ್ಸವದ ಹಾದಿಯುದ್ದಕ್ಕೂ “ಜೈ ಮಾರಿ” ಎಂಬ ಘೋಷಣೆಗಳು ಮುಗಿಲು ಮುಟ್ಟಿವೆ. ಭಕ್ತರು ತಮ್ಮ ಹರಕೆಯಂತೆ ರಥಕ್ಕೆ ಬಾಳೆಹಣ್ಣು, ಅರಳು ಹಾಗೂ ಕೋಳಿಗಳನ್ನು ಅರ್ಪಿಸಿ ದೇವಿಗೆ ನಮನ ಸಲ್ಲಿಸಿದರು.

ಶಿರಸಿಯ ಪ್ರಮುಖ ಬೀದಿಗಳಲ್ಲಿ ಸಾಗಲಿರುವ ಭವ್ಯ ರಥಯಾತ್ರೆಯು ಅಂತಿಮವಾಗಿ ಜಾತ್ರಾ ಗದ್ದುಗೆಯನ್ನು ತಲುಪಲಿದ್ದು, ಅಲ್ಲಿ ಒಂಬತ್ತು ದಿನಗಳ ಕಾಲ ದೇವಿಯು ನೆಲೆಸಿ ಭಕ್ತರ ಇಷ್ಟಾರ್ಥಗಳನ್ನು ಪೂರೈಸಲಿದ್ದಾಳೆ. ಕೇವಲ ಕರ್ನಾಟಕ ಮಾತ್ರವಲ್ಲದೆ ನೆರೆ ರಾಜ್ಯಗಳಿಂದಲೂ ಲಕ್ಷಾಂತರ ಜನರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲಾಡಳಿತವು ಭಕ್ತರ ಸುಗಮ ದರ್ಶನಕ್ಕಾಗಿ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.


