ಅಲ್ಲು ಅರ್ಜುನ್ ತಮ್ಮ ಸಹೋದರ ಅಲ್ಲು ಸಿರೀಶ್ ಮದುವೆಯ ಸಂಭ್ರಮಕ್ಕಾಗಿ ಆಯೋಜಿಸಿದ್ದ ಪಾರ್ಟಿಯಲ್ಲಿ ರಾಮ್ ಚರಣ್ ಭಾಗವಹಿಸಿದ್ದು, ಅಯ್ಯಪ್ಪ ಮಾಲಧಾರಿಯಾಗಿರುವ ರಾಮ್ ಚರಣ್ ಮದ್ಯದ ಪಾರ್ಟಿಯಲ್ಲಿ ಕಾಣಿಸಿಕೊಂಡಿರುವುದರ ಬಗ್ಗೆ ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದರು. ಆದರೆ, ಈ ವಿವಾದಕ್ಕೆ ಸಂಬಂಧಿಸಿದಂತೆ ಅಲ್ಲು ಸಿರೀಶ್ ಸ್ಪಷ್ಟನೆ ನೀಡುವ ಮೂಲಕ ಎಲ್ಲ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.
ಸಹೋದರನ ಮದುವೆ ಮುನ್ನ ನಡೆದ ಈ ಕಾಕ್ಟೇಲ್ ಪಾರ್ಟಿಯಲ್ಲಿ ರಾಮ್ ಚರಣ್ ಕೇವಲ ಅತಿಥಿಯಾಗಿ ಬಂದು ಶುಭ ಹಾರೈಸಿ ತಕ್ಷಣವೇ ನಿರ್ಗಮಿಸಿದ್ದಾರೆ , ಪಾರ್ಟಿಯಲ್ಲಿ ಮದ್ಯಪಾನ ಅಥವಾ ಇತರ ಚಟುವಟಿಕೆಗಳು ಆರಂಭವಾಗುವ ಮೊದಲೇ ರಾಮ್ ಚರಣ್ ಅಲ್ಲಿಂದ ಹೊರಟಿದ್ದರು ಕೌಟುಂಬಿಕ ಸಂಬಂಧಗಳ ಹಿನ್ನೆಲೆಯಲ್ಲಿ ಹಾಗೂ ಸಹೋದರನ ಮೇಲಿನ ಪ್ರೀತಿಯಿಂದಾಗಿ ಅವರು ಕಾರ್ಯಕ್ರಮಕ್ಕೆ ಹಾಜರಾಗಿದ್ದರೇ ಹೊರತು ಮಾಲೆಗೆ ಯಾವುದೇ ಅಪಚಾರ ಎಸಗಿಲ್ಲ ಎಂಬುದು ಈ ಮೂಲಕ ಸ್ಪಷ್ಟವಾಗಿದೆ.
ರಾಮ್ ಚರಣ್ ಅವರು ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿದ್ದು, ಪ್ರತಿ ವರ್ಷ ಅತ್ಯಂತ ಕಟ್ಟುನಿಟ್ಟಾಗಿ ಮಾಲಧಾರಣೆ ನಿಯಮಗಳನ್ನು ಪಾಲಿಸುತ್ತಾರೆ. ಸಿನಿಮಾ ಪ್ರಚಾರದಂತಹ ಅನಿವಾರ್ಯ ಸಂದರ್ಭಗಳಲ್ಲೂ ಅವರು ಪಾದರಕ್ಷೆ ಧರಿಸದೆ, ನಿಯಮಬದ್ಧವಾಗಿ ನಡೆದುಕೊಳ್ಳುವ ಶಿಸ್ತನ್ನು ಹೊಂದಿದ್ದಾರೆ. ಇಂತಹ ಭಕ್ತಿವಂತ ನಟ ಅಯ್ಯಪ್ಪ ಮಾಲೆಗೆ ಚ್ಯುತಿ ತರುವ ಕೆಲಸ ಮಾಡಲಾರರು ಎಂಬುದು ಅವರ ಅಭಿಮಾನಿಗಳ ವಾದವಾಗಿದೆ.


